ಕುಂಬಳೆ ಸುಂದರರಾವ್ಗೆ ಅಗರಿ ಪ್ರಶಸ್ತಿ ಪ್ರದಾನ
ಲೇಖಕರು : ಉದಯವಾಣಿ
ಮ೦ಗಳವಾರ, ಡಿಸೆ೦ಬರ್ 31 , 2013
|
ಯಕ್ಷಗಾನ ಕಲೆ ನಿರಂತರ ಚಲನಶೀಲತೆ ಒಳಗೊಂಡಿದ್ದು, ಅದರ ಬಹುತ್ವವನ್ನು ಅನೇಕ ವಿನ್ಯಾಸಗಳ ಹಿನ್ನೆಲೆಯಲ್ಲಿ ಚರ್ಚಿಸಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಕೇಂದ್ರದ ನಿರ್ದೇಶಕ ಡಾ| ಕೆ ಚಿನ್ನಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಡಿ. 25ರಂದು ಸುರತ್ಕಲ್ ಗೋವಿಂದದಾಸ ಕಾಲೇಜ್ನ ಸಭಾಂಗಣದಲ್ಲಿ ಸುರತ್ಕಲ್ನ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ವೇದಿಕೆ ಹಾಗೂ ಸುರತ್ಕಲ್ ಗೋವಿಂದದಾಸ ಕಾಲೇಜ್ನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರ ಇವರ ಸಹಯೋಗದಲ್ಲಿ ನಡೆದ ಅಗರಿ ಸಂಸ್ಮರಣಾ ವೇದಿಕೆಯ ದಶಮಾನೋತ್ಸವ, ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ಅವರಿಗೆ ಅಗರಿ ಪ್ರಶಸ್ತಿ ಪ್ರದಾನ ಮತ್ತು ಆಗರಿ ಸಂಸ್ಮರಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
|
ಚಿತ್ರ ಕೃಪೆ : ರಾಮ್ ನರೇಶ್, ಮ೦ಚಿ
|
ಯಕ್ಷಗಾನ ವಿವಿಧ ನೆಲೆಗಳಲ್ಲಿ ಪ್ರಯೋಗ ಕಾಣುತ್ತಿದ್ದು, ಅ ಪರಂಪರೆ ವಿಸ್ತರಿಸುವ ವಿನೂತನ ಅಯಾಮ ನೀಡುವ ಮಹತ್ವದ ಹೊಣೆಗಾರಿಕೆ ಯಕ್ಷಗಾನ ಕಲಾವಿದರಾದ್ದಾಗಿದೆ. ಭಾಗವತಿಕೆಯ ಅತ್ಯುತ್ತಮ ಮಾದರಿಗಳಲ್ಲಿ ಅಗರಿ ಮಾದರಿ ಒಂದಾಗಿದ್ದು, ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆಯ ವೈಶಿಷ್ಠತೆಯ ಅಧ್ಯಯನ ಮತ್ತು ದಾಖಲೀಕರಣ ಇಂದಿನ ಅಗತ್ಯವಾಗಿದೆ ಎಂದರು.
ಕಿರಿಯ ಪೀಳಿಗೆ ಮೂಲಕ ಮುನ್ನಡೆಯಬೇಕು
ಅಗರಿ ಪ್ರಶಸ್ತಿ ಸೀಕರಿಸಿದ ಹಿರಿಯ ಕಲಾವಿದ ಹಾಗೂ ಮಾಜಿ ಶಾಸಕ ಕುಂಬಳೆ ಸುಂದರ ರಾವ್ ಮಾತನಾಡಿ, ತನ್ನ ಕಲಾ ವ್ಯಕ್ತಿತ್ವ ರೂಪಿಸಿದ ಅಗರಿಯಂತಹ ಶ್ರೇಷ್ಠ ಕಲಾವಿದರ ಹೆಸರಿನ ಪ್ರಶಸ್ತಿ ಸ್ವೀಕರಿಸಿ ಧನ್ಯತೆ ಪಡೆದಿದ್ದೇನೆ. ಕಲಾ ಪಂರಂಪರೆ ನಿರಂತರ ಪ್ರವಹಿಸುವ ನೀರಿನಂತಿದ್ದು ಕಿರಿಯ ಪೀಳಿಗೆಯ ಮೂಲಕ ಮುನ್ನಡೆಯಬೇಕು ಎಂದರು.
ವಾಚಿಕ ಅಭಿನಯದ ಅತ್ಯುತ್ತಮ ಮಾದರಿ
ಉದಯವಾಣಿ ಪತ್ರಿಕೆಯ ನಿವೃತ್ತ ಉಪ ಸಂಪಾದಕ ಹಾಗೂ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಕೆ.ಎಂ. ರಾಘವ ನಂಬಿಯಾರ್ ಅಭಿನಂದನಾ ಭಾಷಣ ಮಾಡಿ, ವಾಚಿಕ ಅಭಿನಯದ ಅತ್ಯುತ್ತಮ ಮಾದರಿಯಾಗಿ ಕುಂಬಳೆಯವರು ಪ್ರಸಿದ್ದರಾಗಿದ್ದಾರೆ ಎಂದರು.
ಶ್ರೇಷ್ಠ ಭಾಗವತರು
ಅಗರಿ ಸಂಸ್ಮರಣೆ ಮಾಡಿದ ಪತ್ರಕರ್ತ ನಾ. ಕಾರಂತ ಪೆರಾಜೆ ಮಾತನಾಡಿ, ರಂಗ ನಿರ್ದೇಶನದ ಸಾಧ್ಯತೆಯನ್ನು ಹಲವು ವರ್ಷಗಳ ಹಿಂದೆ ಯಕ್ಷಲೋಕಕ್ಕೆ ಪರಿಚಯಿಸಿದ ಅಗರಿಯವರು ಯಕ್ಷಗಾನ ಕಲಾವಿದರಿಗೆ ತಮ್ಮ ಪಾಂಡಿತ್ಯ, ಸಾಹಿತ್ಯ ಜ್ಞಾನಗಳನ್ನು ಧಾರೆಯೆರೆದು ಪ್ರೋತ್ಸಾಹಿಸಿದ ಶ್ರೇಷ್ಠ ಭಾಗವತರು ಎಂದರು.
'ಯಕ್ಷಗಾನದ ಗರಿ-ಅಗರಿ' ಪುಸ್ತಕವನ್ನು ಮಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ| ವಸಂತ್ ಕುಮಾರ್ ಪೆರ್ಲ ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಅಗರಿ ವೇದಿಕೆಯ ಗೌರವಾಧ್ಯಕ್ಷ ಅಗರಿ ರಘುರಾಮ ರಾವ್, ಅಧ್ಯಕ್ಷ ಪಿ. ಪರಮೇಶ್ವರ ಐತಾಳ, ಉಪಾಧ್ಯಕ್ಷ ಹಾಗೂ ಕಾಲೇಜ್ನ ಪ್ರಾಚಾರ್ಯ ಪ್ರೊ| ರಾಜ್ಮೋಹನ್ರಾವ್, ಅಗರಿ ಭಾಸ್ಕರ ರಾವ್, ಅಗರಿ ದಿನೇಶ್ ರಾವ್, ಬಿ. ಸುಬ್ಟಾರಾವ್, ನಿತ್ಯಾನಂದ ಕಾರಂತ ಪೊಳಲಿ, ಲಕ್ಷ್ಮಣ ದೇವಾಡಿಗ, ದೇವಪ್ಪ ಕುಳಾಯಿ, ವೆಂಕಟೇಶ ಎಂ.ಕೆ., ಗಣೇಶ, ಗಿರೀಶ್ ನಾವಡ, ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಪಿ. ಶ್ರೀಧರ ಐತಾಳ್ ಸ್ವಾಗತಿಸಿ, ಕೋಶಾಧಿಕಾರಿ ಪ್ರೊ| ಗಿರಿಧರ ಹತ್ವಾರ್ ಪ್ರಸ್ತಾಪಿಸಿದರು, ಕಾರ್ಯದರ್ಶಿ ಅಗರಿ ರಾಘವೇಂದ್ರ ರಾವ್ ವಂದಿಸಿದರು. ಪ್ರಶಸ್ತಿ ಪತ್ರವನ್ನು ಸಂಘಟನಾ ಕಾರ್ಯದರ್ಶಿ ಪ್ರಸಿದ್ದ ಪಿ. ವಾಚಿಸಿದರು. ಪ್ರೊ| ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
http://www.udayavani.com
|
|
|